ಶ್ರೀ ಗುರುಭ್ಯೋ ನಮಃ
ನಮ್ಮ ಸನ್ಮಾನ್ಯ ಪ್ರಧಾನಮಂತ್ರಿಗಳ ಜನ್ಮ ಕುಂಡಲಿ
ಜನ್ಮ ದಿನಾಂಕ : ೧೭-೯-೧೯೫೦, ಸಮಯ ಬೆಳಿಗ್ಗೆ ೧೧.-೦೦ ಸ್ಥಳ: ವಡೋದರಾ
ಲಗ್ನ ; ವೃಶ್ಚಿಕ ( ೮-೪೮) ಕುಜ (೦-೫೫) ಚಂದ್ರ (೮-೪೮) – ಗುರು ( ೬-೩೫) ಕುಂಭದಲ್ಲಿ ೪ ನೇ ಭಾವ, ರಾಹು ( ೫-೧೩) ಮೀನಾ ೫ ನೇ ಭಾವ, ಶುಕ್ರ ( ೧೫-೪೧), ಶನಿ ( ೨೯-೩೯) ಸಿಂಹ ರಾಶಿ, ಬುಧ( ೦-೪೭) ಕೇತು ( ೫-೧೩) ಕನ್ಯಾ ೧೧ ನೇ ಭಾವ.
ಭಾವ ಕುಂಡಲಿಯಲ್ಲಿ ಶನಿಯೂ ಸಹಾ ೧೧ ನೇ ಭಾವ.
ಈಗ ಶನೈಶ್ಚರನ ಸಂಚಾರ ಜನ್ಮರಾಶಿಯಿಂದ ಮತ್ತು ಜನ್ಮಲಗ್ನದಿಂದ ಮೂರನೆಯ ರಾಶಿ. ಮಕರದಲ್ಲಿ ಶನೈಶ್ಚರನ ಅಷ್ಟಕವರ್ಗ ಬಿಂದುಗಳು ೬, ಇಷ್ಟು ಬಿಂದುಗಳು ಬರುವುದು ಬಹಳ ಅಪರೂಪ ಎಂದೇ ಹೇಳಬೇಕು. ೩ ಮತ್ತು ೪ ನೇ ಭಾವಾಧಿಪತಿ ಶನೈಶ್ಚರನಿಂದ, ೨ ಮತ್ತು ೫ ನೇ ಭಾವಾಧಿಪತಿ ಗುರುವಿನಿಂದ, ಲಗ್ನ ಮತ್ತು ೬ ನೇ ಭಾವಾಧಿಪತಿ ಮಂಗಳನಿಂದ, ೭ ಮತ್ತು ೧೨ ನೇ ಭಾವಾಧಿಪತಿ ಶುಕ್ರನಿಂದ, ೯ ನೇ ಭಾವಾಧಿಪತಿ ಚಂದ್ರನಿಂದ, ಹೀಗೆ ಈ ಐದು ಗ್ರಹಗಳಿಂದ ಐದು ಬಿಂದುಗಳು ಮತ್ತು ಲಗ್ನದಿಂದ ಒಂದು ಬಿಂದು ಸೇರಿ ೬ ಬಿಂದುಗಳು. ಸರ್ವಾಷ್ಟಕ ಅಥವಾ ಸಮುದಾಯ ಅಷ್ಟಕವರ್ಗವು ಮಕರ ರಾಶಿಯಲ್ಲಿ ೩೨ ಇರುವುದೂ ಸಹಾ ವಿಶೇಷವೇ ಆಗಿದೆ. ಇದರ ಜತೆಗೆ ನವಂಬರ್ ೨೦೧೯ ರಿಂದ ಗುರುವಿನ ಧನುಸ್ ರಾಶಿಯ ಸಂಚಾರ ಸಹಾ ಅನುಕೂಲಕರವಾಗಿಯೇ ಇದೆ.
ಜನ್ಮರಾಶಿಯಿಂದ ೩ ನೇ ರಾಶಿಯಲ್ಲಿ ಶನೈಶ್ಚರನ ಸಂಚಾರ ಉತ್ತಮಫಲಗಳನ್ನೇ ನೀಡುವಂತಹುದು. ಜತೆಗೆ ಹೆಚ್ಚು ಅಷ್ಟಕವರ್ಗ ಬಿಂದುಗಳು ಉತ್ತಮ ಫಲವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇಷ್ಟನ್ನು ಪರಿಶೀಲಿಸಿಯೇ ಮಕರ ರಾಶಿಯ ಶನೈಶ್ಚರನ ಸಂಚಾರ ನಮ್ಮ ಪ್ರಧಾನ ಮಂತ್ರಿಗಳಿಗೆ ಅತ್ಯುತ್ತಮ ಫಲವನ್ನು ಕೊಡುತ್ತ್ತದೆ ತನ್ಮೂಲಕ ರಾಷ್ಟ್ರಕ್ಕೂ ಒಳ್ಳೆಯ ದಿನಗಳು ಬರಲಿವೆ ಎಂದು ನಿರ್ಧರಿಸಬಹುದಾದರೂ, ಈ ಹಿಂದೆ ಐದು ಜನ್ಮ ಕುಂಡಲಿಗಳ ಅಧ್ಯಯನ ಮಾಡುವಾಗ ಅನುಸರಿಸಿದ ಎಲ್ಲಾ ಮಾನದಂಡಗಳನ್ನೂ ಇಲ್ಲೂ ಅನುಸರಿಸಿದರೆ ಮಾತ್ರ ಅಧ್ಯಯನದ ಉದ್ದೇಶ ಈಡೇರುತ್ತದೆ.
28-11-2011 ರಿಂದ ಚಂದ್ರ ದೆಶೆ ನಡೆಯುತ್ತಿದ್ದು, 28-11-2021 ಕ್ಕೆ ಅಂತ್ಯವಾಗಲಿದೆ. ಚಂದ್ರದೆಶೆ ಆರಂಭವಾದಾಗ ಚಂದ್ರಗ್ರಹವು ಧನುಸ್ ಅಂದರೆ ಜಾತಕನ 2 ನೇ ಭಾವದಲ್ಲಿ ಸಂಚರಿಸಿದ್ದು, ಈಗ 28-5-2019 ರಿಂದ 28-3-2020 ರವರಗೆ ದಶಾನಾಥನಾದ ಚಂದ್ರನು 11 ನೇ ಭಾವದ ಫಲವನ್ನು ನೀಡುತ್ತಿದ್ದು, ನಂತರ 28-1-2021 ರವರೆಗೆ 12 ನೇ ಭಾವದ ಫಲ ನೀಡುತ್ತಾರೆ. ವಿಶೇಷ ವೆಂದರೆ ರಾಷ್ಟ್ರದ ಕುಂಡಲಿಯ ಪ್ರಕಾರವೂ 10-9-2015 ರಿಂದಲೇ ಚಂದ್ರದೆಶೆ ನಡೆಯುತ್ತಿದ್ದು, 10-11-2019 ರಿಂದ 10-9-2020 ರವರೆಗೆ ದಶಾನಾಥನು 8 ನೇ ಭಾವದ ಫಲವನ್ನು ನೀಡುತ್ತಿದ್ದಾನೆ. ರಾಷ್ಟ್ರದಲ್ಲಿ ಅಶಾಂತಿ, ಆಸ್ತಿ ಪಾಸ್ತಿಗಳ ನಾಶ, ಪ್ರತಿಭಟನೆಗಳನ್ನು ನಾವು ನೋಡುತ್ತಿದ್ದೇವೆ. ಇತ್ತೀಚಿನ ಸೂರ್ಯಗ್ರಹಣದ ಫಲವೂ ಇದಕ್ಕೆ ಸೇರಿಕೊಂಡಿತು, 28-3-2020 ರಿಂದ 10-9-2020 ರವರೆಗೆ ರಾಷ್ಟ್ರದ ಧನ ಹೆಚ್ಚು ವೆಚ್ಚವಾಗುತ್ತದೆ. ಅದು ನಮ್ಮ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವುದಕ್ಕಾಗಿಯೇ ಆಗುವ ಸಾಧ್ಯತೆಗಳಿವೆ.
ರಾಷ್ಟ್ರದ ಕುಂಡಲಿಯಲ್ಲಿ ಆಗಲೀ ಅಥವಾ ಪ್ರಧಾನಮಂತ್ರಿಗಳ ಜನ್ಮ ಕುಂಡಲಿಯಲ್ಲಿಯಾಗಲೀ ಮಕರ ರಾಶಿಯಲ್ಲಿ ಯಾವ ಗ್ರಹಗಳೂ ಇಲ್ಲದಿರುವ ಕಾರಣ ಮಕರ ಶನಿಯು ಜನ್ಮಕುಂಡಲಿಯಲ್ಲಿನ ಯಾವ ಗ್ರಹದ ಮೇಲೆಯೂ ಸಂಚರಿಸುತ್ತಿಲ್ಲಾ. ಆದರೆ ರಾಷ್ಟ್ರದ ಕುಂಡಲಿಯ ಶನಿ, ಬುಧ, ಶುಕ್ರ, ಚಂದ್ರ ಮತ್ತು ರವಿಗ್ರಹಗಳ ಮೇಲೆ ಮಕರ ರಾಶಿ ಸಂಚಾರಕಾಲದಲ್ಲಿಯ ಶನಿಗ್ರಹದ ವೀಕ್ಷಣೆ ಇರುತ್ತದೆ. ಶನಿಗ್ರಹವು ರಾಷ್ಟ್ರದ ಕುಂಡಲಿಗೆ ಯೋಗಕಾರಕರಾಗಿದ್ದು ಇದು ಒಂದು ಬಹಳ ಉತ್ತಮ ವಿದ್ಯಮಾನ ಎಂದೇ ಹೇಳಬೇಕು. ಪ್ರಧಾನ ಮಂತ್ರಿಗಳು ಕನಿಷ್ಟ ಐದು ರಾಷ್ಟ್ರಗಳ ಸಹಕಾರ ಪಡೆಯುವ ಮೂಲಕ ರಾಷ್ಟ್ರವನ್ನು ಅಭಿವ್ರುದ್ಧಿಯತ್ತ ನಡೆಸುತ್ತಾರೆ ಅಷ್ತೇ ಅಲ್ಲದೆ ಭಯೋತ್ಪಾದನೆಗೆ ಸಂಪೂರ್ಣ ತಡೆಯೊಡ್ಡುತ್ತಾರೆ.
ರಾಷ್ಟ್ರದ ಕುಂಡಲಿಯ ಲಗ್ನಾಧಿಪತಿ 3 ನೇ ಭಾವದಲ್ಲಿ ಅತಿಶತೃವಿನ ರಾಶಿಯಲ್ಲಿ ಯೌವನಸ್ಥಿತಿಯಲ್ಲಿ ಇದ್ದು, 3 ನೇ ಭಾವಾದಿಪತಿ ಚಂದ್ರನು ಸ್ವಂತ ರಾಶಿಯಲ್ಲಿ ಮೃತ ಸ್ಥಿತಿಯಲ್ಲಿರುವುದು ಈ 70 ವರ್ಷಗಳಿಂದ ನಾವು ನಮ್ಮ ಪಕ್ಕದ ರಾಷ್ಟ್ರದಿಂದ ಅನುಭವಿಸುತ್ತಿರುವ ತೊಂದರೆಗೆ ಕಾರಣ ಎಂದು ಖಂಡಿತವಾಗಿಯೂ ಹೇಳಬಹುದು. ಈಗ ಶನಿಗ್ರಹವು ತನ್ನ 10 ನೇ ದೃಷ್ಟಿಯಿಂದ ರಾಷ್ಟ್ರದ ಕುಂಡಲಿಯಲ್ಲಿ 6 ನೇ ಭಾವದಲ್ಲಿರುವ ಗುರುಗ್ರಹವನ್ನು ವೀಕ್ಷಿಸುತ್ತಿರುವುದರಿಂದ ಪಕ್ಕದ ರಾಷ್ಟ್ರದ ಉಪದ್ರವ ಕೊನೆಗೊಳ್ಳುವುದು ಸಾಧ್ಯವಾಗುತ್ತದೆ.
ಪ್ರಧಾನಮಂತ್ರಿಗಳ ಜನ್ಮಕುಂಡಲಿಯ 5 ನೇ ಭಾವ, 9 ನೇ ಭಾವ ಮತ್ತು 12 ನೇ ಭಾವಗಳಿಗೆ ಮಕರದಲ್ಲಿ ಸಂಚರಿಸುವ ಶನಿಗ್ರಹದ ವೀಕ್ಷಣೆ ಇರುವುದು ಸಹಾ ಹೆಚ್ಚು ಹಣ ವೆಚ್ಚವಾಗುವುದನ್ನೇ ಸೂಚಿಸುತ್ತದೆ. ಹಣದ ವೆಚ್ಚ ಮತ್ತು ಹಣದ ವ್ಯಯ ಇವುಗಳ ನಡುವಿನ ವ್ಯತ್ಯಾಸ ನಮಗೆ ತಿಳಿಯದಿರುವುದೇನಲ್ಲಾ. ನಾನು ಇಲ್ಲಿ ಹೇಳುತ್ತಿರುವುದು ಹಣದ ವೆಚ್ಚದ ಬಗ್ಗೆ.
ರಾಷ್ಟ್ರದ ಕುಂಡಲಿಯನ್ನು ಗಮನಿಸಿದರೆ 11 ನೆಯ ಭಾವ, 3 ನೇ ಭಾವ, 6 ನೇ ಭಾವಗಳಿಗೆ ಮಕರದಲ್ಲಿ ಸಂಚರಿಸುವ ಶನಿಗ್ರಹದ ವೀಕ್ಷಣೆ ಇರುವುದು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಷ್ಟೆ ಅಲ್ಲದೆ ಅಭಿವೃದ್ಧಿ ಸಹಾ ಆಗುತ್ತದೆ. ಅಕ್ಕ ಪಕ್ಕದ ರಾಷ್ಟ್ರಗಳು ಪಾಠ ಕಲಿತುಕೊಳ್ಳುವುದೂ ಸಹಾ ಆಗುತ್ತದೆ. ಶತೃನಿಗ್ರಹವೂ ಸಾದ್ಯವಾಗುತ್ತದೆ. ರಾಷ್ಟ ಮಟ್ಟದ ರಾಜಕೀಯ ನಾಯಕರಿಗೆ ಆರೋಗ್ಯ ಬಿಗಡಾಯಿಸುವುದು. ನಾವು ಅವರನ್ನು ಕಳೆದುಕೊಳ್ಳುವ ಸಾಧ್ಯತೆಗಳೂ ಗೋಚರಿಸುತ್ತದೆ.
ಚಂದ್ರ ಸಂಚಾರವು ಪ್ರಧಾನಮಂತ್ರಿಯವರ ರಾಶಿಯಿಂದ 3 ನೇ ರಾಶಿಯಲ್ಲಿ ರುವುದರಿಂದ ಶನಿಗ್ರಹವು ತಾಮ್ರ ಮೂರ್ತಿಯಾಗಿ 75% ಶುಭಫಲಗಳನ್ನೇ ಹೇಳಬೇಕು. ರಾಷ್ಟ್ರದ ಕುಂಡಲಿಯಲ್ಲೂ ಚಂದ್ರ ಸಂಚಾರವು 7 ನೇ ರಾಶಿಯಲ್ಲಿರುವುದರಿಂದ ಶನಿಗ್ರಹವು ತಾಮ್ರಮೂರ್ತಿಯಾಗಿ 75% ಶುಭಫಲಗಳನ್ನೇ ಹೇಳಬೇಕು.
ಶನಿಗ್ರಹದ ಮಕರ ರಾಶಿ ಸಂಚಾರ ಕಾಲದಲ್ಲಿ ಗುರುಗ್ರಹವೂ ಶನಿಗ್ರಹವನ್ನು ಮಕರದಲ್ಲಿ ಕೂಡಿಕೊಳ್ಳುತ್ತದೆ. ಇದರ ಪರಿಣಾಮವನ್ನು ಮತ್ತೊಮ್ಮೆ ನೋಡೋಣ. ಈಗ ನಮ್ಮ ಅಧ್ಯಯನ ಮಕರದಲ್ಲಿ ಶನಿಗ್ರಹದ ಸಂಚಾರಕ್ಕೆ ಸೀಮಿತವಾಗಿದೆ.
ಈ ಲೇಖನ ಮುಗಿಸುವ ಮುನ್ನ ಕೇಮದ್ರುಮ ಯೋಗ ವೆಂಬ ಒಂದು ಕೆಟ್ಟ ಯೋಗ ಸರಿಯಾದ ರೀತಿಯಲ್ಲಿ ಭಂಗವಾದರೆ ಅದರ ಕೆಟ್ಟ ಪರಿಣಾಮಕ್ಕೆ ಮಾತ್ರ ತಡೆ ಆಗುವಷ್ಟೇ ಅಲ್ಲದೆ ಅಧಿಕಾಧಿಕ ಉತ್ತಮ ಫಲಗಳನ್ನು ನೀಡಲು ಸಾಧ್ಯ ಎನ್ನುವುದು ನನ್ನ ಅನುಭವಕ್ಕೆ ಬಂದಿದ್ದು, ಈ ಬಗ್ಗೆ ವಿದ್ವಾಂಸರು ಮತ್ತಷ್ಟು ಜಾತಕಗಳನ್ನು ಪರಿಶೀಲಿಸಿ ಅಧ್ಯಯನ ಕೈಗೊಳ್ಳಬೇಕೆಂದು ಅತ್ಯಂತ ವಿನಯಪೂರ್ವಕವಾಗಿ ವಿದ್ವಾಂಸರಲ್ಲಿ ಪ್ರಾರ್ಥಿಸುತ್ತಿದ್ದೇನೆ.
ನಮ್ಮ ಪ್ರಧಾನಮಂತ್ರಿಗಳ ಜನ್ಮ ಕುಂಡಲಿ ಇದಕ್ಕೆ ಒಂದು ಜೀವಂತ ಉದಾಹರಣೆಯಾಗಿದೆ, ಅಷ್ಟೇ ಅಲ್ಲದೆ ಅವರ ಜಾತಕದಲ್ಲಿ, ತ್ರಿಕ ರಾಶಿಗಳಾದ 6, 8, 12, ಅಶುಭ ಸ್ಥಾನಗಳಲ್ಲಿ ಯಾವುದೇ ಗ್ರಹವು ಇಲ್ಲದಿರುವುದೂ ಸಹಾ ಒಂದು ವಿಶೇಷವೆಂದೇ ಪರಿಗಣಿಸಬೇಕು.
ಇಲ್ಲಿ ಯಾವುದೇ ಸೂಕ್ಷ್ಮ ವಿಚಾರಗಳನ್ನು ಪ್ರಸ್ತಾಪಿಸಲು ಹೋಗುವುದಿಲ್ಲಾ. ಪ್ರಧಾನಮಂತ್ರಿಯವರ ಹಾಗೂ ರಾಷ್ಟ್ರದ ಜನ್ಮ ಕೂಡಲಿಯ ಅಧಾರದಿಂದ ಮಕರ ರಾಶಿಯ ಶನಿಯ ಸಂಚಾರವನ್ನು ವಿಶ್ಲೇಷಿಸಿದರೆ ಭಾರತಕ್ಕೆ ಅತ್ಯುತ್ತಮ, ಉಜ್ವಲ ಭವಿಷ್ಯವಿದೆ. ಆದಿನಗಳು ಈಗ ಆರಂಭವಾಗಿವೆ ಎಂದು ಹೇಳಲು ಯಾವ ಸಂದೇಹವೂ ಇಲ್ಲಾ. ನಿಜವಾದ ಪ್ರಜಾಪ್ರಭುತ್ವದ ಪ್ರಯೋಜನವನ್ನು ನಾವೆಲ್ಲರೂ ಅನುಭವಿಸುವಂತಾಗಲು ನಮಗೆ ಕೊಂಚ ತಾಳ್ಮೆ ಬೇಕಿದೆ. ಸಮಾಧಾನ ಬೇಕಿದೆ ಅಷ್ಟೆ.
ಈ ಲೇಖನವು ಶನಿಗ್ರಹದ ಸಂಚಾರಕ್ಕೆ ಮಾತ್ರ ಸೀಮಿತವಾಗಿದ್ದರಿಂದ ಷೋಡಶವರ್ಗಗಳ ಪರಿಶೋಧನೆಯನ್ನು ಕೈಗೆತ್ತಿಕೊಂಡಿಲ್ಲಾ ಎಂಬುದನ್ನು ಅತ್ಯಂತ ವಿನಯಪೂರ್ವಕವಾಗಿ ತಿಳಿಸಬಯಸುತ್ತೇನೆ. ಆದರೂ ಮೇಲ್ನೋಟಕ್ಕೆ ಷೋಡಶವರ್ಗಗಳ ಗ್ರಹಸ್ಥಿತಿಯೂ ಉತ್ತಮವಾಗಿರುವುದು ಕಂಡುಬರುತ್ತದೆ.
ನಾನು ಈ ಅಧ್ಯಯನವನ್ನು ಕೈಗೊಂಡಿರುವುದು 60 ವರ್ಷಗಳಿಂದ ಜ್ಯೋತಿಷ್ಯ ಅಭ್ಯಾಸ ಮಾಡಿರುವ ನನ್ನ ಶೈಕ್ಷಣಿಕ ಆಸಕ್ತಿಯಿಂದಲೇ ಹೊರತು, ನಾನೊಬ್ಬ ಈ ರಾಷ್ಟ್ರದ ಸಾಮಾನ್ಯರಲ್ಲಿ ಅತೀ ಸಾಮಾನ್ಯ ನಾಗರೀಕ ಮಾತ್ರ. ನಾನು ಯಾವ ರಾಜಕೀಯ ಪಕ್ಷದ ಅಥವಾ ರಾಜಕೀಯ ನಾಯಕರ ಬೆಂಬಲಿಗನೂ ಅಲ್ಲಾ ವಿರೋಧಿಯೂ ಅಲ್ಲ ಎಂದು ನನ್ನ ಆತ್ಮ ಸಾಕ್ಷಿಯಾಗಿ ಈ ಮೂಲಕ ಘೋಷಿಸಿಕೊಳ್ಳುತ್ತಿದ್ದೇನೆ.
ಸ್ವದೇಶೋ ಭುವನತ್ರಯಂ
ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು
ಓಂ ಶಾಂತಿಃ ಶಾಂತಿಃ ಶಾಂತಿಃ