ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಅಷ್ಟಾವಕ್ರ ಗೀತೆಯ 6 ನೆಯ ಅಧ್ಯಾಯದ 2 ನೇ ಶ್ಲೋಕ:-
ಮಹೋದಧಿರಿವಾಹಂ ಸ ಪ್ರಪಂಚೋ ವೀಚಿಸಽನ್ನಿಭಃ ।
ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ ॥ 6-2॥
ನಾನು ಸಾಗರದಂತೆ, ಪ್ರಪಂಚವು ಸಾಗರದ ಅಲೆಗಳಂತೆ. ಇದನ್ನು ಅರಿಯುವುದೇ ಜ್ಞಾನ. ಈ ಜ್ಞಾನ ಬಂದರೆ ತ್ಯಜಿಸುವುದಾಗಲೀ, ವಶಪಡಿಸುಕೊಳ್ಳುವುದಾಗಲೀ, ಲಯ ಗೊಳಿಸುವುದಾಗಲೀ ಅಂತ್ಯಗೊಳಿಸುವುದಾಗಲೀ ಯಾವುದೂ ಇರುವುದಿಲ್ಲಾ.
ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಸಾಗರಕ್ಕೆ ಒಂದು ವಿಶೇಷ ಸ್ಥಾನವಿದೆ. ಅನಂತವಾದದ್ದನ್ನು ಹೇಳಲು ನಮ್ಮ ಋಷಿಗಳು ಸಾಗರವನ್ನು ಉದಹರಿಸಿದ್ದಾರೆ. ಆತ್ಮವು ಅನಂತವಾದ್ದು ಏಕೆಂದರೆ ಅದು ಬ್ರಹ್ಮನ್ ಆಗಿದೆ.
ಈ ಶ್ಲೋಕದಲ್ಲಿ ಪ್ರಪಂಚವನ್ನು ಸಾಗರದ ಅಲೆಗಳಿಗೆ ಹೋಲಿಸಿ, ಪ್ರಪಂಚವು ಅಲೆಗಳಂತೆ ಅಶಾಶ್ವತ ಆದರೆ ಆತ್ಮವು ಸಾಗರದಂತೆ ಅನಂತವೂ ಶಾಶ್ವತವೂ ಆಗಿದೆ ಎಂದು ಹೇಳಲಾಗಿದೆ
ಸೃಷ್ಟಿ ಯಲ್ಲಿ ಎಲ್ಲವೂ ಒಂದಲ್ಲ ಒಂದರ ಬೆಂಬಲ, ಅಥವಾ ಆಶ್ರಯವನ್ನು ಹೊಂದಿರಲೇ ಬೇಕು. ಇಷ್ಟು ವಿಶಾಲವಾದ ಭೂಮಿಯೂ ಸಹಾ ಸೂರ್ಯ ಮತ್ತು ಗ್ರಹ ಮಂಡಲದ ಆಶ್ರಯದಿಂದಲೇ ಇದೆ. ಹಾಗಾದರೆ ಯಾವುದರ ಆಶ್ರಯವೂ ಇಲ್ಲದೆ ಇರುವುದು ಯಾವುದಾದರೂ ಇದೆಯೇ ? ಅಷ್ಟೇ ಅಲ್ಲದೆ ಎಲ್ಲವೂ ಅದರಲ್ಲಿಯೇ ಆಶ್ರಯ ಹೊಂದಿರುವಂತಾದ್ದು ಇದೆಯೇ? ಅದನ್ನೇ ನಾವು ಆತ್ಮ, ಅಥವಾ ಶಾಶ್ವತ ವಾದ ಆತ್ಮ ಅಥವಾ ಸರ್ವೋಚ್ಚ ಆತ್ಮ ಎಂದು ಕರೆಯುತ್ತಿರುವುದು.
ನಮ್ಮ ಪ್ರಜ್ಞೆಯು ಅಲೆಗಳಂತೆ ಸಾಗರದ ಮೇಲ್ಮೈಯಲ್ಲಿರುವುದರಿಂದ ನಾವು ಬಹಳ ಸುಲಭವಾಗಿ ಗೊಂದಲಗಳಿಗೆ ಒಳಗಾಗುತ್ತೇವೆ. ಮತ್ತು ಗೊಂದಲಗಳ ನಿವೃತ್ತಿಗೆ ಸಾಂತ್ವನ ಹೇಳುವಂತಹ ಒಬ್ಬ ಸ್ನೇಹಿತನನ್ನೋ, ಒಬ್ಬ ಆಚಾರ್ಯರನ್ನೋ, ಗುರುವನ್ನೋ ಅಥವಾ ನಾವು ಯಾವುದನ್ನು ದೇವರು ಎಂದು ಭಾವಿಸಿದ್ದೇವೋ ಅದನ್ನು ಆಶ್ರಯಿಸುತ್ತೇವೆ. ಆದರೆ ನಮ್ಮೊಳಗೇ ಇರುವ ಆಳವಾದ, ಅತ್ಯಂತ ಸ್ಥಿರವಾದ “ನಮ್ಮನ್ನೇ” ನೋಡಿಕೊಳ್ಳುವ ಮೂಲಕ ನಮ್ಮ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುವುದೇ ಇಲ್ಲಾ.
ನಾವು ಎಲ್ಲಿಯವರೆಗೆ ಮೇಲ್ಮೈಯಲ್ಲಿರುವ ಪ್ರಜ್ಞೆಯಲ್ಲಿ ಜೀವಿಸುತ್ತಾ ಅಲ್ಲಿಯ ಅಲೆಗಳ ಯೋಚನೆಗಳ, ಭಾವನೆಗಳಿಗೆ ಸ್ಪಂದಿಸುತ್ತಿರುತ್ತೇವೆಯೋ ಅಲ್ಲಿಯವರೆಗೂ ನಾವು ಸಂದರ್ಭಕ್ಕೆ ತಕ್ಕಂತೆ ಏರಿಳಿತಗಳಿಗೆ ಒಳಗಾಗುತ್ತೇವೆ.
ನಾವು ನಮ್ಮೊಳಗೆ ಆಳವಾಗಿ ಇಳಿದು ಆ ಸಾಗರದ ಆಳವನ್ನು ಅನುಭವವನ್ನು ಹೊಂದಲು ಸಾಧ್ಯವಾದಾಗ ಮಾತ್ರವೇ ನಿಜವಾದ ಪ್ರಶಾಂತತೆಯನ್ನು ಹೊಂದಲು ಸಾಧ್ಯವಾಗುತ್ತದೆ.
ನಾವು ಅಸಂತೋಷವಾಗಿದ್ದಾಗ, ಅಭಯವನ್ನು ನಮ್ಮೊಳಗೇ ಕಂಡುಕೊಳ್ಳುವ ಪ್ರಯತ್ನ ಪಡೋಣ. ನಮ್ಮೊಳಗೆ ಆಳವಾಗಿ ಇಳಿಯುವ ಮೂಲಕ ನಮಗೆ ಆಶ್ರಯವನ್ನು , ಆಧಾರವನ್ನು ನಮ್ಮಲ್ಲೇ ಪಡೆಯುವ ಪ್ರಯತ್ನ ಪಡೋಣ. ನಿಜವಾದ ಮುಕ್ತಿ ಎಂದರೆ, ಯಾವುದರ ಮೇಲೆಯೂ ಅವಲಂಬಿತವಾಗದೇ ಇರುವುದೇ ಆಗಿದೆ. ಯಾವಾಗ ನಾವು ನಿಜವಾಗಿ ಸ್ವತಂತ್ರವಾಗುತ್ತೇವೆಯೋ ಆಗ ನಾವು ಇತರರಿಗೆ ಸಾಂತ್ವನ ಹೇಳಲು, ಆಧಾರವಾಗಲು ಸಾಧ್ಯವಾಗುತ್ತದೆ
ಮನಸ್ಸು ಸಹಾ ಮೇಲ್ಮೈ ಮನಸ್ಸು ಮಾತ್ರ ಪ್ರಕ್ಷುಬ್ಧತೆ ಮತ್ತು ಅಶಾಂತಿಗೆ ಒಳಗಾಗುತ್ತದೆ. ಮನಸ್ಸಿನ ಆಳದಲ್ಲಿ ಸದಾ ಶಾಂತಿ ನೆಲಸಿರುತ್ತದೆ. ಅದಕ್ಕಾಗಿಯೇ ಆತಂಕ ಮತ್ತು ಒತ್ತಡಗಳಿಂದ ಹೊರಗೆ ಬರಲು ಧ್ಯಾನವು ಸಹಕಾರಿಯಾಗಿರುವುದು.
ಸಾಗರದ ಅಲೆಗಳು ಮನಸಿನ ಮೇಲ್ಮೈಯನ್ನು ಸೂಚಿಸಿದರೆ, ಸಾಗರವು ಮನಸಿನ ಆಳವನ್ನು ಸೂಚಿಸುತ್ತದೆ. ನಮ್ಮ ಮನಸ್ಸು ತನ್ನದೇ ರೀತಿಯಲ್ಲಿ ಅನಂತವಾದ್ದು. ನಮ್ಮೊಳಗೇ ಆಳವಾಗಿ ಇರುವಂಥಾದ್ದು ಮನಸ್ಸಿನ ಸೂಕ್ಶ್ಮ ಕ್ಷೇತ್ರದಲ್ಲಿ ನಾವು ನಿಜವಾಗಿಯೂ ಸಾಗರದಂತೆ ಅಗಾಧವಾದ ಆಳವಾಗಿದ್ದೇವೆ. ಆದರೂ “ಆತ್ಮ” ನಿಗೆ ಹೋಲಿಸಿದರೆ ಮನಸು ಕೆಳಹಂತದಲ್ಲಿದೆ. ನಮಗೆ ಮನಸ್ಸನ್ನು ಅರಿಯುವುದೇ ಕಷ್ಟಸಾಧ್ಯವಾಗಿರುವಾಗ ಇನ್ನು ಆತ್ಮನನ್ನು ಅರಿಯುವುದು ಇನ್ನೆಷ್ಟು ಕಷ್ಟಸಾಧ್ಯವಾಗಿರಬಹುದು?
ನಾವು ಧ್ಯಾನಕ್ಕೆ ಅಥವಾ ಮಂತ್ರಯೋಗದಲ್ಲಿ ತೊಡಗಿಕೊಂಡಾಗ, ನಮ್ಮ ಮನಸಿನ ಯೋಚನೆಗಳು , ಭಾವನೆಗಳು ಸಾಗರದ ಅಲೆಗಳಂತೆ ಮೇಲ್ಮೈಯಲ್ಲಿ ಇರುವಂತಹವು ಮಾತ್ರ. ನಾವು ಅವನ್ನು ವೀಕ್ಷಿಸುತ್ತಲೇ ಸ್ಥಿರವಾಗಿರುವ “ಆತ್ಮ” ದ ಅಸ್ಥಿತ್ವವನ್ನು ಅನುಭವಿಸಲು ಪ್ರಯತ್ನಿಸಬೇಕು. ಆಗ ನಾವು ಹೊರಗಿನಿಂದ ಆಶ್ರಯವನ್ನು ಪಡೆಯುವ ಬದಲು ನಮಗೆ ನಾವೇ ಆಶ್ರಯವಾಗುತ್ತವೆ ಮತ್ತು ಬೇರೆಯವರಿಗೂ, ಬೆಂಬಲ / ಆಶ್ರಯ ಕೊಡಲು ಸಾಧ್ಯವಾಗುತ್ತದೆ. ಅದು ನಮ್ಮ ಗುರಿಯಾಗಬೇಕು
ನಾವು ನಮ್ಮೊಳಗಿರುವ ವೀಕ್ಷಕನನ್ನು ಅರಿಯುವಂತಾದರೆ, ನಮ್ಮ ಆಧ್ಯಾತ್ಮಿಕ ಹಾದಿಯಲ್ಲಿನ ಮೊದಲ ಅಡಚಣೆಯನ್ನು ನಿವಾರಿಸಿದಂತೆ ಆಗುತ್ತದೆ. ಈ ಹಂತವು, ಸಾಗರದ ಅಲೆಗಳು ಸಾಗರ ಅಲ್ಲಾ ಎಂಬ ಅರಿವನ್ನು ಮೂಡಿಸುತ್ತದೆ. ಮತ್ತು ನಾವು ನಮ್ಮನ್ನು ಏನು ಎಂದು ಭಾವಿಸಿದ್ದೆವೋ ಅದು ನಾವು ಅಲ್ಲಾ ಎಂಬ ಅರಿವೂ ಸಹಾ ಆಗುತ್ತದೆ.
ನಾವೇ ವೀಕ್ಶ್ಜಕರು. ಈ ವೀಕ್ಷಕ ಎನ್ನುವುದು ವಿಶ್ವವ್ಯಾಪಿ. ಇದು ಎಲ್ಲರಲ್ಲೂ ಇರುವಂಥಾದ್ದು. ಈ ವೀಕ್ಷಕ ಬೇರೆ ಬೇರೆ ಜೀವಿಗಳಲ್ಲಿ ಬೇರೆ ಬೇರೆ ಪ್ರಪಂಚಗಳ ಅನುಭವವನ್ನು ಪಡೆದರೂ ಈ ವೀಕ್ಷಕ ಬದಲಾವಣೆಯಾಗುವುದೋ ಅಥವಾ ಅವುಗಳಿಂದ ಪ್ರಭಾವಕ್ಕೊಳಪಡುವುದೇ ಇಲ್ಲಾ. ಹಾಗಾದರೆ ಈ ವೀಕ್ಷಕ ಎನ್ನುವುದು ಜೀವಿಯೇ ಅಲ್ಲವೇ,ಅದು ಹೆಣ್ಣೇ,ಗಂಡೇ ಅಥವಾ ಇದು ಒಂದು ಸ್ಥಿತಿ ಅಥವಾ ವಿದ್ಯಮಾನವೇ? ಉತ್ತರ ಸಿಗಲಾರದು.
ಸಾಗರ ಇಲ್ಲದೇ ಅಲೆಗಳು ಇರಲು ಸಾಧ್ಯವಿಲ್ಲಾ. ಹಾಗೆಯೇ ನಾವು ಇಲ್ಲದೆ ಅನುಭವ, ಗ್ರಹಿಕೆ, ಸಂವೇದನೆ ಅಥವಾ ಬಾಹ್ಯ ಸತ್ಯತೆ ಇವಾವೂ ಇರಲು ಸಾಧ್ಯವಿಲ್ಲಾ. ಆ “ನಾವು” ಎನ್ನುವುದೇ “ಪುರುಷ”, “ಸಾಕ್ಷಿ” ಮತ್ತು “ ಆನಂದಿಸುವವರು” ನಾವೇ ಇವೆಲ್ಲದರ ಮೂಲ ಮತ್ತು ಆಧಾರ ಮತ್ತು ಆಶ್ರಯ.
ನಾವು ಸಾಗರವೇ ನಾವು ಎಂಬ ಭಾವನೆಯಿಂದ ಧ್ಯಾನ ಅಥವಾ ಮಂತ್ರಯೋಗದಲ್ಲಿ ತೊಡಗಿಸಿಕೊಳ್ಳಬೇಕು. ನಮಗೆ ಯಾವುದೇ ಗಡಿಯಿಲಾ, ಮಿತಿಗಳಿಲ್ಲಾ ಮತ್ತು ನಮ್ಮನ್ನು ಯಾವುದೇ ಪದಗಳಿಂದ ವರ್ಣಿಸಲಾಗುವುದಿಲ್ಲಾ ಎಂಬ ಅರಿವು ನಮಗೆ ಬರಬೇಕು. ನಾವೇ ಎಲ್ಲೆಲ್ಲೂ ಪಸರಿಸಿದ್ದೇವೆ, ನಾವು ಅನಂತದಲ್ಲಿ ಲೀನವಾಗಿದ್ದೇವೆ ಎನ್ನುವ ಅನುಭವ ನಮಗೆ ಆಗ ಆಗಲೇ ಬೇಕು.
ಈ ಸ್ಥಿತಿಯನ್ನು ಹೊಂದಲು ಪ್ರಯತ್ನವನ್ನು ಆರಂಭಿಸಲು ಮಹಾಶಿವರಾತ್ರಿಯ ಈ ದಿವಸಕ್ಕಿಂತ ಉತ್ತಮ ವಾದ ದಿವಸ ಮತ್ತೊಂದು ಇರಲಾರದು. ಈ ದಿನ ಬೆಳಗಿನಿಂದ ಉಪವಾಸ ಅಂದರೆ ಹತ್ತಿರದಲ್ಲಿ ವಾಸವಾಗಿದ್ದೇವೆ. “ ನಾನು” ಎಂಬ “ಬ್ರಹ್ಮನ್” “ಅತ್ಮ” ದ ಹತ್ತಿರ ವಾಸವಾಗಿದ್ದೇವೆ. ಈಗ ಜಾಗರಣೆ ಎಂದರೆ ನಮ್ಮೊಳಗಿನ ವೀಕ್ಷಕನನ್ನು ಜಾಗೃತವಾಗಿರಿಸಲು ಪ್ರಯತ್ನ ಪಡುತ್ತಿದ್ದೇವೆ.
ಈ ಪ್ರಯತ್ನದಿಂದ ನಮ್ಮ ಗುರಿಯನ್ನು ತಲುಪಲು ನಮಗೆ ಗುರುಮಂಡಲದ ಸಂಪೂರ್ಣ ಅನುಗ್ರಹ ಸದಾ ಇದ್ದೇ ಇದೆ.
ಅಷ್ಟಾವಕ್ರ ಗೀತೆ ಅಧ್ಯಾಯ 6 ಮತ್ತು 8ನೆ – 8 ಶ್ಲೋಕಗಳ ಕೊಂಡಿಗಳು:
ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 1 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 2 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 3 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 4 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 8, ಶ್ಲೋಕ 1 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 8 , ಶ್ಲೋಕ 2 ಮತ್ತು 3 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ, ಅಧ್ಯಾಯ 8, ಶ್ಲೋಕ 4 ರ ಕನ್ನಡ ವಿವರಣೆ
ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 1 ರ ಕನ್ನಡ ವಿವರಣೆ – Atmanandanatha
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 4 ರ ಕನ್ನಡ ವಿವರಣೆ – Atmanandanatha
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 3 ರ ಕನ್ನಡ ವಿವರಣೆ – Atmanandanatha