ಓಂ ಶ್ರೀ ಗುರುಭ್ಯೋ ನಮಃ
ಶ್ರೀ ದುರ್ಗಾ ಸಪ್ತಶತಿಯ ಬಗ್ಗೆ ಪ್ರಸ್ತಾಪಿಸುವಾಗ, ಸಪ್ತಶತಿಯ ಎಲ್ಲಾ ಶ್ಲೋಕಗಳೂ ಒಂದಲ್ಲ ಒಂದು ರೀತಿಯ ಮಂತ್ರಶಕ್ತಿಯನ್ನು ಹೊಂದಿವೆ ಎಂದು ಹೇಳಿದ್ದೇನೆ.
ಸಪ್ತಶತಿಯಿಂದ ಆಯ್ದ ಏಳು ಶ್ಲೋಕಗಳನ್ನು ಸಪ್ತಶ್ಲೋಕೀ ಎಂದು ಕರೆಯಲಾಗಿದ್ದು, ಇವು ಒಂದೊಂದೂ ಒಂದೊಂದು ಬಗೆಯ ಮಂತ್ರ ಶಕ್ತಿಯನ್ನು ಹೊಂದಿವೆ,
ಈ ಪೈಕಿ “ ರೋಗಾನ ಶೇಷಾನ” ಎಂದು ಆರಂಭವಾಗುವ ಶ್ಲೋಕದ ಪಠನೆ / ಶ್ರವಣದಿಂದ ಆನಾರೋಗ್ಯವಾಗಿರುವವರು ಬೇಗ ಗುಣಹೊಂದುತ್ತಾರೆ ಎಂದು ಹೇಳಲಾಗಿದೆ.
ಮಂತ್ರ ಅಂದರೆ ಒಂದು ಶಬ್ಧ ತರಂಗಕ್ಕೆ ಇಂತಹ ಒಂದು ಶಕ್ತಿ ಇರುವುದನ್ನು ನಮ್ಮ ವೈಜ್ಞಾನಿಕ ಲೋಕವು ಒಪ್ಪಲು ಸಾಧ್ಯವಿಲ್ಲಾ. ಆದರೆ, ಇದೇ ವೈದ್ಯ ಲೋಕ ತಮ್ಮ ಚಿಕಿತ್ಸೆಗೆ ರೋಗಿ ಪ್ರತಿಕ್ರಿಯಿಸುತ್ತಿಲ್ಲ್ಲಾ ಎಂದು ಹೇಳುವುದನ್ನು ನಾವು ಹಲವಾರು ಬಾರಿ ಕೇಳಿದ್ದೇವೆ.
ಮಂತ್ರಗಳ ಶಬ್ಧ ತರಂಗಗಳು ರೋಗಿಗೆ ತನ್ನ ಅನಾರೋಗ್ಯವನ್ನು ಧೃಢವಾಗಿ ಎದುರಿಸುವ ಮಾನಸಿಕ ಸ್ಥೈರ್ಯವನ್ನು ನೀಡುವ ಬಗ್ಗೆ ಮತ್ತು ರೋಗಿಯು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುವಂತೆ ಮಾಡುವುದರ ಬಗ್ಗೆ ವೈದ್ಯ ಲೋಕವು ಮುಕ್ತ ಮನಸ್ಸಿನಿಂದ ವೈಜ್ಞಾನಿಕ ಅಧ್ಯಯನವನ್ನು ಕೈಗೊಳ್ಳಬೇಕು.
ನನ್ನ ವೈಯಕ್ತಿಕ ನೆಲೆಯಲ್ಲಿ ಮಾಡಿರುವ ಅಧ್ಯಯನಗಳಿಗೆ ವೈಜ್ಞಾನಿಕ ಮನ್ನಣೆ ಸಿಗಬೇಕಾದರೆ ವೈದ್ಯಲೋಕವೇ ಇಂತಹ ಅಧ್ಯಯನವನ್ನು ಕೈಗತ್ತಿಕೊಳ್ಳಬೇಕು. ಅದರಿಂದ ನನಗೇನೂ ಪ್ರತಿಫಲ ಬೇಕಿಲ್ಲಾ ಮತ್ತು ಅದರ ಅವಶ್ಯಕತೆಯೂ ನನಗಿಲ್ಲಾ ಎಂದು ಸ್ಪಷ್ಟಪಡಿಸುತ್ತಿದ್ದೇನೆ.
ಮುಂದಿನ ಯೂಟ್ಯೂಬ್ ವಿಡಿಯೋ ದಲ್ಲಿ ’ ರೋಗಾನ ಶೇಷಾನ ’ ಎಂದು ಆರಂಭ ಆಗುವ ದುರ್ಗಾ ಸಪ್ತಶ್ಲೋಕಿಯ ಶ್ಲೋಕ 108 ಬಾರಿ ಇದ್ದು, ಇದನ್ನು ಹಾಗೆಯೇ ಪಠಿಸುವುದು ಅಥವಾ ಕೇಳುವುದು. ಇದನ್ನು ಹೇಳುತ್ತಾ ವಿಭೂತಿ ಅಥವಾ ಕುಂಕುಮವನ್ನು ಮಂತ್ರಿಸಿ ಹಣೆಗೆ ಹಚ್ಚುವುದು. ವಿಭೂತಿಯಲ್ಲಿ ರಾಸಾಯನಿಕ ಅಂಶಗಳಿಲ್ಲವೆಂಬ ಖಾತ್ರಿ ಇದ್ದರೆ ಒಂದು ಚಿಟಿಕಿಯನ್ನು ಬಾಯಿಯಲ್ಲೂ ಹಾಕುವುದು.
ನಾನು ಇದನ್ನು ಬರೆಯುವಾಗ ಆದ ಒಂದು ಘಟನೆಯನ್ನು ಹೇಳಬೇಕು. ಬರೆದಾಯಿತು, ಆಡಿಯೋ ರೆಕಾರ್ಡ್ ಮಾಡಿ ಆಯಿತು. ಆಗ ಕಣ್ಣಿಗೆ ಬಿತ್ತು ಶ್ವಾಸಕೋಶಗಳ ಹಾಳಾಗಿರುವ ಜೀವಕಣಗಳು ಎಲ್ಲಿಂದಲೋ ಹೊಸ ಜೀವಕಣಗಳನ್ನು ಪಡೆದುಕೊಂಡು ಮತ್ತೆ ಜೀವಂತವಾದ ಬಗ್ಗೆ ಟೋಕಿಯೊದಲ್ಲಿ ಕೈಗೊಂಡ ಒಂದು ಅಧ್ಯಯನ. ಈ ಹೊಸ ಜೀವಕಣಗಳ ಉಗ್ರಾಣ ಎಲ್ಲಿದೆ ಎಂಬ ಬಗ್ಗೆ ಅದ್ಯಯನ ಮುಂದುವರೆಯುತ್ತದೆಯಂತೆ.
ಪ್ರಕೃತಿ ತನ್ನ ಒಡಲಲ್ಲಿ ಇನ್ನೆಷ್ಟು ರಹಸ್ಯಗಳನ್ನು ಇಟ್ಟು ಕೊಂಡಿದೆಯೋ ಬಲ್ಲವರಿಲ್ಲಾ. ವಿಜ್ಞಾನ ಜಗತ್ತಿಗೆ ಸಿಕ್ಕಿರುವುದು ಆ ವಿಶಾಲವಾದ ಸಾಗರದ ಒಂದು ಹನಿ ಮಾತ್ರ.
ಈ ಸ್ತೋತ್ರವನ್ನು ರೆಕಾರ್ಡ್ ಮಾಡಿದ್ದು ನನ್ನ ಸ್ನೇಹಿತರೊಬ್ಬರಿಗೆ ಕಳಿಸುವ ಸಲುವಾಗಿ. ಅದು ಎಲ್ಲರಿಗೂ ಅನುಕೂಲವಾದರೆ ಆಗಲಿ.
ಮಂತ್ರಶಾಸ್ತ್ರ ನಮ್ಮ ಅಗಾಧ ಮತ್ತು ಅಮೂಲ್ಯ ಸಂಪತ್ತು ಅದರ ದುರುಪಯೋಗದಿಂದ ಅಥವಾ ತಪ್ಪು ಉಪಯೋಗದಿಂದ ನಾವು ಅದರಲ್ಲಿ ನಂಬಿಕೆ ಕಳೆದುಕೊಂಡಿದ್ದರೂ, ಮಂತ್ರಗಳ ಶಬ್ಧ ತರಂಗಗಳಿಗೆ ಇರುವ ಶಕ್ತಿ ಅಪಾರ, ಅಪರಿಮಿತ, ಅಮೋಘ ಮತ್ತು ಅಗಾಧ. ಇವುಗಳ ಸದುಪಯೋಗ ಮಾನವಕುಲಕ್ಕಷ್ಟೇ ಸೀಮಿತವಾಗದೆ, ಎಲ್ಲಾ ಅಣು ರೇಣು ತೃಣ ಕಾಷ್ಟಗಳಿಗೂ ಆಗಲಿ ಎಂದು ಅನುಗ್ರಹಿಸುವಂತೆ ಗುರುಮಂಡಲದಲ್ಲಿ, ಗುರುಮಂಡಲ ರೂಪಿಣಿ ಶ್ರೀ ಲಲಿತಾಮಹಾತ್ರಿಪುರಸುಂದರೀ ದೇವಿಯ ಪಾದಾರವಿಂದಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಾ.
ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು
ಓಂ ಶಾಂತಿಃ ಶಾಂತಿಃ ಶಾಂತಿಃ