ಶ್ರೀ ಗುರುಭ್ಯೋ ನಮಃ
ಇದು ಎರಡನೇ ಜನ್ಮ ಕುಂಡಲಿ. ಈ ಹಿಂದೆ ಒಂದನೇ ಕುಂಡಲಿಗೆ ಯಾವೆಲ್ಲಾ ಮಾನದಂಡಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತೋ ಆ ಎಲ್ಲಾ ಮಾನದಂಡಗಳನ್ನೂ ಈ ಕುಂಡಲಿಯ ವಿಶ್ಲೇಷಣೆಗೆ ತೆಗೆದುಕೊಳ್ಳಲಾಗುತ್ತದೆ.
ಈ ಜಾತಕನ ವಿವರ ಹೀಗಿದೆ:
ಜನನ : ದಿ ೨೮-೧-೧೯೯೦, ಸಮಯ ; ಬೆಳಿಗ್ಗೆ ೬-೩೦ ಸ್ಥಳ : ದಾವಣಗೆರೆ , ಕರ್ನಾಟಕ , ಇಂಡಿಯಾ
ಜನ್ಮ ಲಗ್ನ: ಮಕರ ೬-೩೭, ಚಂದ್ರ ೨೯-೩೧, ರವಿ ೧೪-೦೭, ರಾಹು ೨೩-೧೮
ಮಿಥುನ; ಗುರು ( ವ) ೮-೨೦
ಕರ್ಕಾಟಕ ; ಕೇತು ೨೩-೧೮
ಧನುಸ್ : ಮಂಗಳ ೫-೦೯, ಬುಧ ೧೯-೨೫ ಶನಿ ೨೫-೦೩ ಶುಕ್ರ ೨೯-೪೮
ಈಗ ೨೪-೧-೨೦೨೦ ರಿಂದ ಶನಿ ಗ್ರಹವು ಮಕರ ರಾಶಿಯಲ್ಲಿ ಸಂಚಾರ ಆರಂಭ ಮಾಡಲಿದ್ದು, ಜಾತಕನ ಲಗ್ನ ಮತ್ತು ರಾಶಿ ಎರಡೂ ಸಹಾ ಮಕರ ವೇ ಆಗಿದೆ. ಶನಿಯ ಸಾಡೇಸಾತಿಯ ಎರಡನೇ ಹಂತ ಇದಾಗಿದೆ. ಈಗಾಗಲೇ ಕಳೆದ ಎರಡೂವರೆ ವರ್ಷಗಳಿಂದ ಮೊದಲ ಹಂತದ ಸಾಡೇಸಾತಿ ( ಏಳರಾಟ ಶನಿಕಾಟ) ನಡೆದಿದೆ. ಮಕರದಲ್ಲಿ ಶನಿಯ ಅಷ್ಟಕವರ್ಗ ಬಿಂದು ೨ ಆಗಿದ್ದು, ಅದು ಕೂಡ ಶನಿಯ ಶುಭಫಲ ವನ್ನು ತೋರುತ್ತಿಲ್ಲಾ. ಸುಲಭವಾಗಿ ಹೇಳಬೇಕೆಂದರೆ ಜಾತಕನು ಕಷ್ಟ ನಷ್ಟಗಳಿಗೆ ಗುರಿಯಾಗಿರುವುದು ಖಚಿತ ವಾಗುತ್ತದೆ. ಮಕರದಲ್ಲಿ ಸರ್ವಾ ಷ್ಟಕ ವರ್ಗಬಿಂದುಗಳೂ ಸಹಾ ೨೫ ಇದ್ದು ಅದರಿಂದಲೂ ಏನೂ ಪ್ರಯೋಜನ ಕಾಣುತ್ತಿಲ್ಲಾ.
ನವಂಬರ್ ೨೦೧೯ ರಿಂದ ಗುರುಗ್ರಹವು ಧನುಸ್ ರಾಶಿಯಲ್ಲಿ ಸಂಚರಿಸುತ್ತಿದ್ದು, ಅದು ಲಗ್ನಕ್ಕೆ ಮತ್ತು ರಾಶಿಗೆ ೧೨ ನೆಯ ಸ್ಥಾನವಾಗಿ, ಅಲ್ಲಿಯೂ ಶುಭ ಫಲಗಳನ್ನು ಹೇಳಲಾಗುತ್ತಿಲ್ಲಾ ಜಾತಕನಿಗೆ ಗುರುದೆಶೆಯು ೨೮-೧೧-೨೦೧೧ ರಿಂದ ನಡೆಯುತ್ತಿದ್ದು, ಗುರುವು ೩ ಮತ್ತು ೧೨ ನೇ ಭಾವಾಧಿಪತಿಯಾಗಿ ೬ ನೇ ಭಾವದಲ್ಲಿದ್ದಾರೆ. ಗುರು ಹೊಂದಿರುವ ಭಾವಗಳಾಗಲೀ, ಸ್ಥಿತ ಇರುವ ಭಾವ / ರಾಶಿಯಾಗಲೀ ಶುಭ ಭಾವ / ರಾಶಿಗಳಲ್ಲಾ. ಗುರುದೆಶೆ ಆರಂಭವಾದಾಗ ಗುರುವು ನಾಲ್ಕನೆ ಭಾವದಲ್ಲಿದ್ದು, ಈಗ, ೨೮-೧೦-೨೦೧೯ ರಿಂದ ೨೮-೨-೨೦೨೧ ರವರೆಗೆ ೧೦ ನೆಯ ಭಾವದ ಫಲವನ್ನೂ, ೨೮-೨-೨೦೨೧ ರಿಂದ ೨೮-೬-೨೦೨೩ ರವರೆಗೆ ೧೧ ನೆಯ ಭಾವದ ಫಲವನ್ನೂ ನೀಡುತ್ತಿದ್ದು, ಗುರು ೩ ನೇ ಭಾವಾಧಿಪತಿಯಾದ ಕಾರಣ ಅಷ್ಟೇನೂ ಒಳ್ಳೆಯ ಫಲ ನೀಡುವುದಿಲ್ಲಾ, ೧೨ ನೇ ಭಾವಾಧಿಪತಿಯಾಗಿ ಹಣ ಆಸ್ತಿಯ ನಷ್ಟ ರೋಗರುಜಿನಗಳನ್ನು ಸೂಚಿಸುತ್ತದೆ. ೬ ನೇ ಭಾವದಲ್ಲಿರುವ ಗ್ರಹ ೨೫% ಫಲ ಕೊಡುತ್ತದೆ ಎಂದು ಶಾಸ್ತ್ರ ಹೇಳುತ್ತದೆ
ಇನ್ನು ಮುಂದಿನ ಮಾನದಂಡ ಎಂದರೆ ಶನಿಗ್ರಹವು ಮಕರದಲ್ಲಿ ಚಲಿಸುವಾಗ, ಜನ್ಮಕುಂಡಲಿ ಯಲ್ಲಿ ಮಕರದಲ್ಲಿದ್ದ ರವಿ, ಚಂದ್ರ ಮತ್ತು ರಾಹು ಗ್ರಹಗಳ ಮೇಲೆ ಚಲಿಸುತ್ತಾರೆ. ರವಿಯ ಮೇಲೆ ಚಲಿಸುವುದರಿಂದ ಕಷ್ಟಪಡುವುದರಿಂದ ಉದ್ಯೋಗದಲ್ಲಿ ಪ್ರಗತಿ, ಹೆಚ್ಚಿನ ಜವಾಬ್ದಾರಿಯನ್ನು ಹೊರುವ ಸಾಧ್ಯತೆ, ನಿಂತುಹೋಗಿರುವ ಯೋಜನೆಗಳು ಮುಂದುವರೆಯುವಿಕೆ, ಅಗಣಿ ಮತ್ತು ವಿದ್ಯುಚ್ಛಕ್ತಿಯ ಬಗ್ಗೆ ಎಚ್ಚರ ಇರಬೇಕು. ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಬೇಕು. ಇಲ್ಲವಾದಲ್ಲಿ ಧನಹಾನಿ ಹಾನಿಯಾಗುವ ಸಾಧ್ಯತೆ, ಧೋರಣೆಯಲ್ಲಿ ಬದಲಾವಣೆ ಆಗಬೇಕು. ಪಿತ್ರಾರ್ಜಿತ ಆಸ್ತಿ ಬರುವ ಸಾಧ್ಯತೆ, ಮದುವೆ ಆಗಿರುವವರು ತಮ್ಮ ಸಂಗಾತಿಯೊಂದಿಗೆ ಸಣ್ಣ ಜಗಳವೂ ಆಗದಂತೆ ಎಚ್ಚರಿಕೆ ವಹಿಸಬೇಕು.. ಕಷ್ಟಪಟ್ಟು ವೃತ್ತಿಯಲ್ಲಿ ತೊಡಗಿಸಿಕೊಂಡರೆ ಉತ್ತಮ ಪ್ರತಿಫಲ ಸಿಗುತ್ತದೆ.
ಶನಿಗ್ರಹವು ಜನ್ಮಕುಂಡಲಿಯ ಚಂದ್ರನ ಮೇಲೆ ಚಲಿಸುವುದರಿಂದ, ವ್ಯಕ್ತಿಯಲ್ಲಿ ಉತ್ತಮ ನಡವಳಿಕೆ ಬರುತ್ತದೆ. ವಿರುದ್ಧ ಲಿಂಗದವರೊಂದಿಗೆ ವ್ಯವಹರಿಸುವಾಗ ಎಚ್ಚರ ಬೇಕು, ಹಣಕಾಸಿನಲ್ಲಿ ಮುನ್ನಡೆ ಮತ್ತು ಎಲ್ಲ ರೀತಿಯ ಸೌಖ್ಯಗಳೂ ದೊರೆಯುತ್ತದೆ. ಕಷ್ಟಪಟ್ಟು ಕೆಲಸಮಾಡುವುದು ಅತಿಮುಖ್ಯ. ಮನಸ್ಸು ಪ್ರಕ್ಷುಬ್ಧವಾಗುವ ಸಾಧ್ಯತೆಗಳಿದ್ದು, ಧ್ಯಾನ ಮತ್ತು ಯೋಗದ ಮೊರೆಹೋಗುವುದು ಉತ್ತಮ. ಶನಿಯು ಜನ್ಮ ರಾಶಿಯನ್ನು ಪ್ರವೇಶಿಸಿದಾಗ ಏಳರಾಟ ಶನಿಯ ಎರಡನೇ ಮಜಲು ಎಂದು ಈಗಾಗಲೇ ಹೇಳಿ ಆಗಿದೆ. ಏಳರಾಟ ಶನಿಯ ಕಾಲದಲ್ಲಿ ಶನಿಯು ಜಾತಕನಿಗೆ ಪಾಠ ಕಲಿಸುವ ಮೂಲಕ ತಿದ್ದುತ್ತಾನೆ. ಶನಿ ಗ್ರಹವು ಉತ್ತಮವಾದ ಮತ್ತು ಕಟ್ಟುನಿಟ್ಟಿನ ಶಿಕ್ಷಕ.
ಶನಿಗ್ರಹವು ಜನ್ಮಕುಂಡಲಿಯ ರಾಹು ಚಲಿಸುವುದರಿಂದ, ಧಾರ್ಮಿಕ ಮತ್ತು ಸಾಮಾಜಿಕ ಕಟ್ಟುಪಾಡುಗಳಿಗೆ ವಿರುದ್ಧವಾದ ನಡತೆ, ಅನಾವಶ್ಯಕ ಯೋಚನೆಗಳು, ಒಂಟಿತನ ಕಾಡುವಿಕೆ ಇವೆಲ್ಲವನ್ನೂ ಸೂಚಿಸುವುದರಿಂದ ಯಾವುದಾದರೂ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವುದರಿಂದ ಈ ಕೆಟ್ಟ ಫಲಗಳ ತೀವ್ರತೆ ಕಡಿಮೆಯಾಗುತ್ತದೆ.
ಶನಿಗ್ರಹದ ಮಕರ ರಾಶಿ ಸಂಚಾರ ಕಾಲದಲ್ಲಿ, ೩೦-೩-೨೦೨೦ ರಿಂದ ೩೦-೬-೨೦೨೦, ೨೦-೧೧-೨೦೨೦ ರಿಂದ ೬-೪-೨೦೨೧ ಮತ್ತು ೧೪-೯-೨೦೨೧ ಇಂದ ೨೧-೧೧-೨೦೨೧ ರವರೆಗೆ ಗುರುಗ್ರಹವು ಶನಿಗ್ರಹದ ಜತೆಯಲ್ಲಿ ಸಂಚರಿಸುತ್ತಿದ್ದು. ಇದು ಜನ್ಮರಾಶಿಯಾದ ಕಾರಣ ಮಾನಸಿಕ ಚಿಂತೆ ಕಾಡುತ್ತದೆ. ಮಕರದಲ್ಲಿ ಗುರುಗ್ರಹದ ಅಷ್ಟಕವರ್ಗ ಬಿಂದು ೬ ಇರುವುದು ಒಂದು ನೆಮ್ಮದಿಯ ವಿಚಾರವಾಗಿದ್ದು, ಗುರುಗ್ರಹದ ಕೆಟ್ಟಪರಿಣಾಮ ಕಡಿಮೆಯಾಗುತ್ತದೆ. ಶನಿಗ್ರಹವು ಚಲಿಸುತ್ತಿರುವ ರಾಶಿಯು ಶುಭಫಲವನ್ನು ನೀಡುವ ರಾಶಿ ಆಗಿಲ್ಲವಾದ ಕಾರಣ ಗೋಚಾರ ವೇಧವನ್ನು ನೋಡುವ ಅವಶ್ಯಕತೆ ಇಲ್ಲಾ.
ಈಗ ಮಕರದಿಂದ ಶನಿಗ್ರಹವು ವೀಕ್ಷಿಸುವ ಭಾವಗಳ ಫಲದ ಬಗ್ಗೆ ನೋಡುವುದಾದರೆ, ೩ ನೇ ಭಾವದ ಮೇಲಿನ ದೃಷ್ಠಿ ಸಹೋದರರಿಂದ ಅನುಕೂಲ ಮತ್ತು ತನ್ನಿಂದ ಸಹೋದರರಿಗೆ ಅನುಕೂಲವನ್ನು ಸೂಚಿಸಿದರೆ, ೭ ನೇ ಭಾವದ ಮೇಲಿನ ದೃಷ್ಠಿ ಸಂಗಾತಿಗೆ ಅನಾರೋಗ್ಯವನ್ನು ಸೂಚಿಸುತ್ತದೆ. ಈ ದೃಷ್ಟಿಯಿಂದ ಪತ್ನಿಯು ಗರ್ಭಿಣಿ ಯಾಗುವುದು, ಮತ್ತು ಹಡೆಯುವುದೂ ಕೂಡಾ ಆಗುವುದು ನನ್ನ ವಿನಮ್ರ ಅನುಭವಕ್ಕೆ ಬಂದಿದೆ. ಶನಿಗ್ರಹದ ೧೦ ನೇ ಭಾವದ ಮೇಲಿನ ದೃಷ್ಠಿ ಉದ್ಯೋಗದಲ್ಲಿ ತೊಂದರೆಯನ್ನು ಸೂಚಿಸುತ್ತದೆ. ತಾನು ಉದ್ಯೋಗಿಯಾಗಿದ್ದರೆ ಉದ್ಯೋಗದಾತನ ಬಗ್ಗೆಯೂ, ತಾನೇ ಉದ್ಯೋಗದಾತನಾಗಿದ್ದರೆ, ತನ್ನ ಉದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ಮಾಡಬೇಕು.
ಹಾಗೆಯೇ, ಶನಿಯ ಮಕರ ಸಂಚಾರ ಕಾಲದಲ್ಲಿ ಜನ್ಮ ಕುಂಡಲಿಯ ೭ ಮತ್ತು ೮ ನೇ ಭಾವಾಧಿಪತಿಗಳ ಮೇಲೆ ಸಂಚರಿಸುವುದರಿಂದ ಇದೂ ಕೂಡ ಶುಭ ಫಲವನ್ನು ನೀಡುವುದಿಲ್ಲಾ.
ನಾವೀಗ ಎಲ್ಲಾ ಮಾನದಂಡಗಳಿಂದಲೂ ಶನಿಗ್ರಹದ ಮಕರ ರಾಶಿಯ ಸಂಚಾರವನ್ನು ಈ ಜನ್ಮ ಕುಂಡಲಿಗೆ ಸಂಬಂಧಿಸಿದಂತೆ ವಿಶ್ಲೇಷಣೆ ಮಾಡಿದ್ದೇವೆ. ಇಲ್ಲಿಯವರೆಗೂ ನಮಗೆ ತಿಳಿದಿದ್ದು, ಈ ಜಾತಕನಿಗೆ ಮಕರ ಶನಿ ಸಂಚಾರ ಪ್ರತಿಕೂಲವೇ ಆಗಿದೆ ಎಂದು.
ಇಂತಹ ಒಂದು ತೀರ್ಮಾನ ಮಾಡಿ ಫಲ ನಿರೂಪಣೆ ಮಾಡುವ ಮೊದಲು, ದಶಾ ನಾಥ ಗುರುಗ್ರಹದ ಜನ್ಮಕುಂಡಲಿಯ ಸ್ಥಿತಿಯನ್ನು ಮತ್ತ್ತೊಮ್ಮೆ ನೋಡೋಣ. ಗುರು ಗ್ರಹವು, ೩ ಮತ್ತು ೧೨ ನೇ ಭಾವಾಧಿಪತಿಯಾಗಿ ೬ ನೇ ಭಾವದಲ್ಲಿ ಸ್ಥಿತನಾಗಿದ್ದರೆ, ೬ ನೇ ಭಾವಾಧಿಪತಿ ಬುಧ, ಗುರುವಿನ ಸ್ವಸ್ಥಾನದಲ್ಲಿ ೧೨ ನೇ ಭಾವದಲ್ಲಿ ಸ್ಥಿತನಾಗಿ ಪರಸ್ಪರ ವೀಕ್ಷಣೆಯಲ್ಲಿದ್ದಾರೆ. ೧೨ ನೇ ಭಾವಾಧಿಪತಿ ೮ ರಲ್ಲೊ ೬ ರಲ್ಲೋ ಇದ್ದರೆ ಸಾಕು ವಿಪರೀತ ರಾಜಯೋಗವನ್ನು ಶಾಸ್ತ್ರ ಹೇಳುತ್ತದೆ. ಇಲ್ಲಿ, ೧೨ ನೇ ಭಾವಾಧಿಪತಿ ೬ ರಲ್ಲಿ, ೬ ನೇ ಭಾವಾಧಿಪತಿ ೧೨ ರಲ್ಲಿದ್ದು ಪರಸ್ಪರ ವೀಕ್ಷಣೆಯು ಇರುವುದೇ ಅಲ್ಲದೆ ಈ ಎರಡೂ ಶುಭಗ್ರಹಗಳೇ ಆಗಿರುವುದು ಅತ್ಯಂತ ಪ್ರಭಲವಾದ ವಿಪರೀತ ರಾಜಯೋಗವನ್ನು ಸೂಚಿಸುತ್ತದೆ ಮತ್ತು ವಿಪರೀತ ರಾಜಯೋಗಕಾರಕನಾದ ಗುರುಗ್ರಹದ ದಶೆಯೂ ನಡೆಯುತ್ತಿದೆ. ಅಂದರೆ ಜಾತಕನು ತನ್ನ ಜೀವಿತದ ಅತ್ಯಂತ ಒಳ್ಳೆಯ ಕಾಲವನ್ನು ಅನುಭವಿಸುತ್ತಿದ್ದಾನೆ ಎನ್ನುವುದರಲ್ಲಿ ಯಾವ ಜ್ಯೋತಿಷಿ ಗಳಿಗೂ ಯಾವುದೇ ಸಂಶಯ ಇರಲು ಸಾಧ್ಯವಿಲ್ಲಾ.
ಈ ವಿಶ್ಲೇಷಣೆ ಮಕರ ರಾಶಿಯ ಶನಿಯ ಸಂಚಾರಕ್ಕೆ ಮಾತ್ರ ಸೀಮಿತವಾಗಿದ್ದು , ಈ ಜಾತಕನ ಮತ್ತಷ್ಟು ಫಲ ನಿರೂಪಣೆ ಮಾಡುವ ಅವಶ್ಯಕತೆ ಇಲ್ಲಾ.
ಈ ಅಧ್ಯಯನದ ಉದ್ದೇಶವು ಈ ಮೊದಲೇ ತಿಳಿಸಿದಂತೆ, ಕೇವಲ ರಾಶಿಯ ಆಧಾರದ ಮೇಲೆ ಗ್ರಹಗಳ ಚಲನೆಯನ್ನು ಅನುಸರಿಸಿ ಫಲ ನಿರೂಪಣೆ ಮಾಡುವುದು ಜ್ಯೋತಿಷಿಯ ಧರ್ಮ ಅಲ್ಲಾ ಎನ್ನುವುದನ್ನು ಮತ್ತು ಇಂತಹ ಫಲನಿರೂಪಣೆಗಳಿಂದ ಸಾಮಾನ್ಯ ನಾಗರಿಕರು ಭಯಭೀತ ರಾಗಬಾರದು, ಎಂಬ ಸಂದೇಶವನ್ನು ಕೊಡುವುದೇ ಆಗಿದೆ ಎಂಬುದನ್ನು ಮತ್ತೊಮ್ಮೆ ತಿಳಿಸಲು ಬಯಸುತ್ತೇನೆ.
ಗುರುಮಂಡಲ ಮತ್ತು ಗುರುಮಂಡಲ ರೂಪಿಣಿ ನನ್ನ ಆರಾಧ್ಯ ದೈವ ಶ್ರೀ ಲಲಿತಾ ಮಹಾತ್ರಿಪುರಸುಂದರಿಯ ಪಾದಪದ್ಮಗಳಲ್ಲಿ ಶ್ರದ್ಧಾ ಭಕ್ತಿ ಪೂರ್ವಕ ಪ್ರಣಾಮಗಳನ್ನು ಅರ್ಪಿಸುತ್ತಾ ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸಂಮಂಗಳಾನಿ ಭವಂತು.