“ಜೀವನ್ಮುಕ್ತಿ ವಿವೇಕ” ಮೊದಲನೇ ಭಾಗ ಈ ಕೆಳಗಿನ ಪ್ರಶ್ನೆಯೊಂದಿಗೆ ಕೊನೆಯಾಗಿತ್ತು.
ಪ್ರಶ್ನೆ :- ಪ್ರಶ್ನೆಗೆ ಸಮಂಜಸವಾದ ಉತ್ತರ ಸಿಕ್ಕಿಲ್ಲಾ- ಈ ಬಂಧನ ಎನ್ನುವುದು ಮನಸ್ಸಿನಿಂದಲೇ ಅಥವಾ ಬಂಧನಕ್ಕೆ ಸಾಕ್ಷಿಯಾಗುವುದರಿಂದಲೇ ? ಇದು ಸಾಕ್ಷಿ ಎನ್ನುವುದಾದರೆ, ಸತ್ಯದ ಅರಿವಿನಿಂದ ಅದನ್ನು ತೆಗೆದುಹಾಕಬಹುದು. ಇದು ಮನಸ್ಸು ಎನ್ನುವುದಾದರೆ, ಹರಿಯುವಿಕೆಯ ಗುಣವನ್ನು ನೀರಿನಿಂದ ಹೇಗೆ ತೆಗೆಯಲು ಸಾಧ್ಯವಿಲ್ಲವೋ, ಬಿಸಿಯ ಗುಣವನ್ನು ಬೆಂಕಿಯಿಂದ ಹೇಗೆ ತೆಗೆಯಲು ಸಾಧ್ಯವಿಲ್ಲವೋ ಹಾಗೆಯೇ ಮನಸ್ಸಿನಿಂದ ಈ ಬಂಧನವನ್ನು ತೆಗೆಯಲು ಸಾಧ್ಯವಿಲ್ಲಾ.
ಉತ್ತರವನ್ನು ಈಗ ನೋಡೋಣ
ಉತ್ತರ :- ನಿಜ, ಇದನ್ನು ಪೂರ್ತಿಯಾಗಿ ತೆಗೆದು ಬಿಡಲು ಸಾಧ್ಯವಲ್ಲದೇ ಇರಬಹುದು ಆದರೆ ನೀರಿಗೆ ಮಣ್ಣು ಬೆರೆತರೆ ಅದು ಅದರ ಹರಿಯುವ ಗುಣ ಕಡಿಮೆ ಆಗುತ್ತದೆ. ಹಾಗೆಯೇ ಅಗ್ನಿಯ ಬಿಸಿಯನ್ನು ರತ್ನ ದಿಂದ ಮತ್ತು ಮಂತ್ರದಿಂದ ಕಡಿಮೆ ಮಾಡಬಹುದು
यथा जलगतं द्र्वत्वं मृत्तिकामॆलनॆनाभिभूयतॆ वह्नॆरौष्ण्यं मणिमन्त्रादिना,
(ಯಥಾ ಜಲಗತಂ ದ್ರವತ್ವಂ ಮೃತ್ತಿಕಾ ಮೇಳ ನೇ ನಾಭಿಭೂಯತೇ ವ್ಹನೇ ರೌಷಣಂ ಮಣಿಮಂತ್ರಾದಿನಾ) .
ಸ್ವಾಮಿ ವಿದ್ಯಾರಣ್ಯರ ಈ ಮಾತು ಬೆಂಕಿಯ ಬಿಸಿಯನ್ನು ಕಡಿಮೆ ಮಾಡಲು ರತ್ನದ ಮತ್ತು ಮಂತ್ರದ ಪ್ರಯೋಗ ಇರುವುದನ್ನು ತಿಳಿಸುತ್ತದೆ.
ಯೋಗ ಸಾಧನೆಯಿಂದ, ಏಕಾಗ್ರತೆಯಿಂದ ಮನಸ್ಸನ್ನು ತಟಸ್ಥ ಗೊಳಿಸಬಹುದು ಎಂದು ಹೇಳುತ್ತಾರೆ ಸ್ವಾಮಿ ವಿದ್ಯಾರಣ್ಯರು. ಯೋಗ ಎಂದರೆ ಮಂತ್ರ ಯೋಗವೂ ಅಹುದು.
ನಾವು ಸಾಮನ್ಯವಾಗಿ ಮಂತ್ರದಲ್ಲಿ ಧ್ಯಾನಾಸಕ್ತರಾಗುವ ಬದಲು ಚಂಚಲತೆಯ ಮನಸ್ಸನ್ನು ತಟಸ್ಥಗೊಳಿಸಲು, ಹತೋಟಿಯಲ್ಲಿಡಲು ಪ್ರಯತ್ನಿಸುತ್ತೇವೆ. ಚಂಚಲತೆ ಮನಸ್ಸಿನ ಸಹಜ ಸ್ವಭಾವ, ಅದನ್ನು ನಾವು ಅದರ ಪಾಡಿಗೆ ಬಿಟ್ಟುಬಿಡೋಣ, ಅದನ್ನು ನಿರ್ಲಕ್ಷಿಸಿ ಬಿಡೋಣ. ನಾವು ಮಂತ್ರ ದಲ್ಲಿ ತಲ್ಲೀನರಾಗೋಣ. ಆಗ ಎಲ್ಲೆಲ್ಲೋ ಸುತ್ತಿ ಸಾಕಾದ ಮನಸ್ಸು ತಾನೂ ಸಹಾ ಮಂತ್ರದೊಂದಿಗೆ ಸಮನ್ವಯತೆಗೆ ಬಂದು ಬಿಡುತ್ತದೆ. ಪ್ರಾಯಶಃ ಸ್ವಾಮಿ ವಿದ್ಯಾರಣ್ಯರು ಮನಸ್ಸನ್ನು ತಟಸ್ಥ ಗೊಳಿಸುವುದರ ಬಗ್ಗೆ ಇದನ್ನೇ ಹೇಳುತ್ತಿದ್ದಾರೆ ಎಂದು ನನಗನ್ನಿಸುತ್ತದೆ.
ಸ್ವಾಮಿ ವಿದ್ಯಾರಣ್ಯರು ಮನುಷ್ಯ ಪ್ರಯತ್ನ ಮತ್ತು ಅದರ ಫಲವು ಪ್ರಯತ್ನಕ್ಕೆ ತಕ್ಕಂತೆ ಇಲ್ಲದಿರುವುದನ್ನು ಪ್ರಸ್ತಾಪಿಸಿ, ನಮ್ಮ ಕರ್ಮಗಳು, ಪ್ರಯತ್ನಕ್ಕೆ ತಕ್ಕ ಫಲ ಕೊಡುವುದಕ್ಕೆ ಅಡ್ಡಿಯಾಗುತ್ತದೆ ಎಂದಿದ್ದಾರೆ. ಉದಾಹರಣೆಯಾಗಿ ರೈತನು ವ್ಯವಸಾಯ ಮಾಡಲು ಪಡುವ ಪ್ರಯತ್ನಕ್ಕೆ ತಕ್ಕ ಫಲ ಕೊಡಲು ಮಳೆಯಿಲ್ಲದೆ ಬರಗಾಲ ಅಡ್ಡಿಯಾಗುವುದನ್ನು ಹೇಳಿದ್ದಾರೆ. ಇದಕ್ಕೆ ವಿರುದ್ಧವಾದ ಹೆಚ್ಚು ಶಕ್ತಿಯುತವಾದ ಕರೀರಿ ಯಜ್ಞಗಳನ್ನು ಪ್ರಸ್ತಾಪಿಸಿ, ಈ ಯಜ್ಞಗಳು ಮಳೆ ತರಿಸುವ ಮೂಲಕ ಬರಗಾಲ ವನ್ನು ದೂರ ಮಾಡುವದನ್ನು ಉದಹರಿಸಿ, ನಾವು ಹೇಗೆ ಕರ್ಮಗಳಿಂದ ಹೊರಗೆ ಬರಲು ಅದಕ್ಕಿಂತ ಹೆಚ್ಚು ಬಲಶಾಲಿಯಾದ ಸಕಾರಾತ್ಮಕ ಕರ್ಮಗಳನ್ನು ಆಚರಿಸಬೇಕು ಎಂಬುದನ್ನು ಸೂಚಿಸಿದ್ದಾರೆ. ಇಲ್ಲಿ ಅವರು ಉದ್ಧಾಲಕ ಮತ್ತು ವೀತಹವ್ಯರ ನೆನಪನ್ನು ನಮಗೆ ತಂದು ಕೊಡುತ್ತಾರೆ.
ಮಂತ್ರದಲ್ಲಿ ಧ್ಯಾನಾಸಕ್ತರಾಗುವ ಮತ್ತೊಂದು ಆಯಾಮವನ್ನು ನೋಡೋಣ. ಮಂತ್ರವು ತನ್ನಷ್ಟಕ್ಕೆ ತಾನೇ ಆಗುತ್ತಿರಲಿ ಅದಕ್ಕೆ ಯಾವ ಪ್ರಯತ್ನವೂ ಬೇಡವಾಗಲಿ. ಆಗ ಅದು ನೀಡುವ ಫಲ ಪ್ರಯತ್ನಕ್ಕೆ ಸರಿಯಾದ್ದೇ ಅಥವಾ ಅಲ್ಲವೇ ಎನ್ನುವ ಪರಿಸ್ಥಿತಿ ಯೇ ಉಧ್ಭವ ಆಗುವುದಿಲ್ಲಾ, ಅಲ್ಲವೇ? !!!!!!. ಈ ಬಗ್ಗೆ ಚಿಂತಿಸೋಣ.
ಮುಂದುವರೆಯುತ್ತದೆ……….
ಹಿಂದಿನ ಭಾಗದ ಕೊಂಡಿಗಳು : ಭಾಗ 1
Pingback: “ಜೀವನ್ಮುಕ್ತಿ ವಿವೇಕ” ಸರಣಿ : ಭಾಗ 1 – Atmanandanatha